ಉಳ್ಳಾಲ ಸೇರಿದಂತೆ ದ.ಕ.ಜಿಲ್ಲೆಯ ನೂರಾರು ಮೊಹಲ್ಲಾಗಳ ಖಾಝಿಗಳೂ ಆಧ್ಯಾತ್ಮಿಕ ನಾಯಕರೂ ನಮ್ಮೆಲ್ಲರ ಮಾರ್ಗದರ್ಶಕರೂ ಆದ ಅಸ್ಸೆಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕೂರತ್ ಅವರ ನಿಧನ ವಾರ್ತೆ ಕೇಳಿ ತೀವ್ರ ಆಘಾತವಾಯಿತು.ಇವರು ಮರ್ಹೂಂ ಶೈಖುನಾ ಅಸ್ಸೆಯ್ಯದ್ ತಾಜುಲ್ ಉಲಮಾ ಅಬ್ದುಲ್ ರಹ್ಮಾನ್ ಅಲ್ ಬುಖಾರಿ ತಂಙಲರ ಸುಪುತ್ರರಾಗಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಬಹು ಸೆಯ್ಯಿದರು ನನ್ನೊಂದಿಗೆ ಮಾತನಾಡಿದ್ದರು.ಆರೋಗ್ಯವಂತರಾಗಿದ್ದ ತಂಙಳ್ ಅವರ ಹಠಾತ್ ನಿಧನ ಸಮಾಜವನ್ನು ಅತೀವ ದುಃಖಕ್ಕೆ ದೂಡಿದೆ.ರೋಗ ರುಜಿನಗಳಿಂದ, ಸಮಸ್ಯೆ ಸಂಕಷ್ಟಗಳಿಂದ ಬಳಲಿ ಬರುವವರಿಗೆ ಆಧ್ಯಾತ್ಮಿಕ ಹಾದಿಯಲ್ಲಿ ಪರಿಹಾರ ಹುಡುಕಿ ತಮ್ಮ ಬಳಿಗೆ ಬರುತ್ತಿದ್ದ ಜನರನ್ನು ರಾತ್ರಿ ಹಗಲೆನ್ನದೆ ಸಂತೈಸುತ್ತಿದ್ದ ಕೂರತ್ ತಂಙಳ್ ಅವರು ಜಾತಿ ಮತ ಭೇದವಿಲ್ಲದೆ, ಬಡವ ಧನಿಕ ವ್ಯತ್ಯಾಸವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು.ಎಲ್ಲರೂ ಪರಸ್ಪರ ಪ್ರೀತಿ ವಿಶ್ವಾಸದಿಂದ ಸರ್ವಶಕ್ತನಿಗೆ ಭಯಪಟ್ಟು ಬದುಕಬೇಕೆಂದು ನಿರಂತರವಾಗಿ ಸಮಾಜವನ್ನು ಬೋಧಿಸುತ್ತಿದ್ದರು.
ಸತ್ಯದ ಹಾದಿಯಲ್ಲಿ ದೃಡವಾಗಿ ನಿಲ್ಲುವ ಅವರ ವ್ಯಕ್ತಿತ್ವ ಮಾದರಿಯಾಗಿತ್ತು.ಅವರ ತಂದೆ ತಾಜುಲ್ ಉಲಮಾರವರ ವಿದಾಯದಿಂದ ದುಃಖಿತವಾದ ಸಮಾಜ ಕೂರತ್ ತಂಙಳ್ ಅವರ ನಿಧನದೊಂದಿಗೆ ಮತ್ತೊಮ್ಮೆ ತಮ್ಮ ಆಸರೆಯನ್ನು ಕಳೆದುಕೊಂಡ ದುಃಖದಲ್ಲಿದೆ.