ಪಿಎಂ ಕಿಸಾನ್’ ಯೋಜನೆಯ ಸೌಲಭ್ಯ ಪಡೆದುಕೊಳ್ಳಲು ರೈತರಿಗೆ ಸೂಚನೆ
- ಬೆಂಗಳೂರು ನಗರ ಜಿಲ್ಲೆ: ಏ.26 (ಕರ್ನಾಟಕ ವಾರ್ತೆ) : ಬೆಂಗಳೂರು ನಗರ ಜಿಲ್ಲೆಯಲ್ಲಿ ‘ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಯೋಜನೆಯಡಿ ಹೆಸರು ನೋದಾಯಿಸಲ್ಪಟ್ಟಿರುವ ರೈತರು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ‘ಕಿಸಾನ್ ಕ್ರೆಡಿಟ್ ಕಾರ್ಡ್’ ಅನ್ನು ಪಡೆಯದೆ ಇದ್ದವರು ಏ.30 ರವರೆಗೆ ಅವಕಾಶ ಕಲ್ಪಿಸಲಾಗಿದ್ದು, ರೈತರು ತಮ್ಮ ಹತ್ತಿರದ ಬ್ಯಾಂಕುಗಳನ್ನು ಸಂಪರ್ಕಿಸಿ ಈ ಯೋಜನೆಯ ಲಾಭವನ್ನು ಪಡೆಯುವಂತೆ ಎಂದು ಜಿಲ್ಲಾಧಿಕಾರಿಗಳಾದ ಜೆ ಮಂಜುನಾಥ್ ಅವರು ಕೋರಿದ್ದಾರೆ.
ಮಾರ್ಚ್ 31 2022 ರವರೆಗೆ ರಾಜ್ಯದಲ್ಲಿ ಒಟ್ಟು 58.42 ಲಕ್ಷ ರೈತರು ‘ಪಿಎಂ ಕಿಸಾನ್ ಸಮ್ಮಾನ್’ ಯೋಜನೆಯಲ್ಲಿ ನೋಂದಾಯಿಸಿಕೊಂಡಿದ್ದು, ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 45,265 ರೈತರು ‘ಪಿಎಂ ಕಿಸಾನ್ ಸಮ್ಮಾನ್’ ನೋಂದಣಿದಾರರಿದ್ದು, ಇದರಲ್ಲಿ ರಾಷ್ಟ್ರೀಕೃತ ಬ್ಯಾಂಕ್, ಗ್ರಾಮೀಣ ಬ್ಯಾಂಕುಗಳು ಹಾಗೂ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳಿಂದ 27,450 ರೈತರು ‘ಕಿಸಾನ್ ಕ್ರೆಡಿಟ್ ಕಾರ್ಡ್’ ಪಡೆದಿದ್ದು, 17,825 ರೈತರು ಈ ‘ಕಾರ್ಡ್’ಗಳ ಸೌಲಭ್ಯವನ್ನು ಪಡೆದುಕೊಳ್ಳಬೇಕು..
“ಕಿಸಾನ್ ಭಾಗೇಧಾರಿ ಪ್ರಾಥಮಿಕತಾ ಹಮಾರಿ” ಎಂಬ ವಿನೂತನ ಕಾರ್ಯಕ್ರಮವು ಚಾಲನೆಗೊಂಡಿದ್ದು. ‘ಪಿಎಂ ಕಿಸಾನ್’ ಯೋಜನೆಯಲ್ಲಿ ಫಲಾನುಭಾವಿಗಳಾಗಿದ್ದು, ಇದುವರೆಗೆ ಕೃಷಿ ಸಾಲ ಪಡೆಯದೆ ಇದ್ದ ರೈತರು ಕೃಷಿಸಾಲವನ್ನು ಹತ್ತಿರ ಬ್ಯಾಂಕ್ ಗಳಲ್ಲಿ ಪಡೆದು ಕೊಳ್ಳುವುದರ ಜೊತೆಗೆ ‘ಪ್ರಧಾನಮಂತ್ರಿಗಳ ಸಾಮಾಜಿಕ ಸುರಕ್ಷಾ’ ಯೋಜನೆಗಳಾದ ‘PMSBY, PMJJBY ಹಾಗೂ ಅಟಲ್ ಪಿಂಚಣಿ’ ಯೋಜನೆಗಳಿಗೂ ಕೂಡಾ ಹೊಸದಾಗಿ ಸೇರ್ಪಡೆಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
##############

ಕ್ಷಯರೋಗ ನಿಯಂತ್ರಣ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ: ಜೆ ಮಂಜುನಾಥ್
ಬೆಂಗಳೂರು ನಗರ ಜಿಲ್ಲೆ ಏ.26 (ಕರ್ನಾಟಕ ವಾರ್ತೆ) : ಜಿಲ್ಲೆಯಲ್ಲಿ ಕ್ಷಯ ರೋಗ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದರ ಜೊತೆಗೆ ಜಿಲ್ಲೆಯಲ್ಲಿ ಕ್ಷಯ ರೋಗಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕೆಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜೆ ಮಂಜುನಾಥ್ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಜಿಲ್ಲಾ ಕ್ಷಯ ರೋಗ ವೇದಿಕೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ 2021- 2022 ನೇ ಸಾಲಿನಲ್ಲಿ ಒಟ್ಟು 1338 ಕ್ಷಯರೋಗ ಪ್ರಕರಣಗಳು ದಾಖಲಾಗಿದ್ದು ಇದರ ನಿಯಂತ್ರಣಕ್ಕೆ ಹೆಚ್ಚು ಹೆಚ್ಚು ಕ್ಷಯ ರೋಗದ ಪರೀಕ್ಷೆಗಳನ್ನು ಮಾಡುವುದರ ಜೊತೆಗೆ ರೋಗಿಗಳನ್ನು ಗುರುತಿಸಿ ರೋಗ ಹರಡದಂತೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಎರಡು ವಾರಕ್ಕಿಂತಲೂ ಹೆಚ್ಚು ನಿರಂತರ ಕೆಮ್ಮು, ರಾತ್ರಿ ವೇಳೆ ಜ್ವರ, ತೂಕ ಇಳಿಕೆ, ಹಸಿವಾಗದಿರುವುದು ಇವು ಕ್ಷಯ ರೋಗದ ಲಕ್ಷಣಗಳಾಗಿದ್ದು, ಇಂತ ಲಕ್ಷಣ ಇರುವ ಸಾರ್ವಜನಿಕರು ತಿಳುವಳಿಕೆಯ ಕೊರತೆಯಿಂದ ನಿರ್ಲಕ್ಷ್ಯ ತೋರುತ್ತಿದ್ದಾರೆ, ಈ ಬಗ್ಗೆ ನಿರ್ಲಕ್ಷ್ಯ ತೋರದೆ ಕೂಡಲೇ ಪರೀಕ್ಷೆಗೊಳಗಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳುವಂತೆ ಅಧಿಕಾರಿಗಳು ಅವರಿಗೆ ಅರಿವು ಮೂಡಿಸಬೇಕೆಂದರು.
ಕ್ಷಯ ರೋಗದ ನಿರ್ಮೂಲನೆ ಕುರಿತಂತೆ ಕಿರುಚಿತ್ರವನ್ನು ತಯಾರಿಸಿ ಎಲ್ಲಾ ಚಿತ್ರ ಮಂದಿರದಲ್ಲಿ ಪ್ರದಶಿಸುವಂತೆ ಸೂಚಿಸಿದರಲ್ಲದೆ ಮಾಧ್ಯಮಗಳ ಮೂಲಕ ಹೆಚ್ಚು ಪ್ರಚಾರ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಕ್ಷಯ ರೋಗಕ್ಕೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ, ಇದನ್ನು ಸಾರ್ವಜನಿಕರು ಸದ್ಭಳಕೆ ಮಾಡಿಕೊಳ್ಳುವಂತೆ ಅವರಲ್ಲಿ ಹೆಚ್ಚಿನ ಜಾಗೃತಿ ಮತ್ತು ಅರಿವು ಮುಡಿಸುವಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಜಿಲ್ಲಾ ಕ್ಷಯ ರೋಗ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಕ್ಷಯ ರೋಗ ಅಧಿಕಾರಿ ಡಾ. ಮಹೇಶ್ ಕುಮಾರ್ ಎಸ್.ಎಸ್ ಅವರು ಮಾತನಾಡಿ ನಮ್ಮ ರಾಜ್ಯವನ್ನು 2025 ರೊಳಗೆ ಕ್ಷಯ ಮುಕ್ತ ಕರ್ನಾಟಕವನ್ನಾಗಿಸುವ ಗುರಿಯನ್ನು ಹೊಂದಿದ್ದೇವೆ ಎಂದರು.
ಗ್ರಾಮ ಪಂಚಾಯಿತಿ ವತಿಯಿಂದ ಕಾರ್ಯಪಡೆಯ ಮೂಲಕ ಕ್ಷಯ ರೋಗದಿಂದ ಬಳಲುತ್ತಿರುವ, ಗುಣಮುಖರಾದ ಅಥವಾ ಅವರ ಕುಟುಂಬದ ಸದಸ್ಯರುಗಳಿಗೆ ಅಗತ್ಯ ಬೆಂಬಲವನ್ನು ನೀಡುವುದರ ಮೂಲಕ ರೋಗಿಗಳ ಸಾಮಾಜಿಕ ದುರ್ಬಲತೆಗಳನ್ನು ಕಡಿಮೆ ಮಾಡಲಾಗುವುದು ಎಂದು ತಿಳಿಸಿದ ಅವರು, ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ಷಯ ಮುಕ್ತ ಕರ್ನಾಟಕ ಕಾರ್ಯತಂತ್ರ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಸಂಬಂಧವಾಗಿ ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ, ಪಿಡಿಓಗಳಿಗೆ ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಿಗೆ ಕ್ಷಯ ರೋಗ ನಿರ್ಮೂಲನೆ ಕುರಿತು ತರಬೇತಿಯನ್ನು ನೀಡಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯಾದ ಶ್ರೀನಿವಾಸ್ ಜಿ.ಎ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮನೋಹರ್ ಎನ್ ಮತ್ತು ಇತರ ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು












