ಬೆಂಗಳೂರು ನಗರದ ಕೋವಿಡ್ ಆಸ್ಪತ್ರೆಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. 12 ಕ್ಕೂ ಹೆಚ್ಚು ಆಸ್ಪತ್ರೆಗಳು ಇದರಲ್ಲಿ ಶಾಮೀಲಾಗಿವೆ ಎನ್ನಲಾಗುತ್ತಿದೆ. ಸರ್ಕಾರ ಈ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಫಾರೂಕ್ ಆಗ್ರಹಿಸಿದ್ದಾರೆ.

: ಬೆಂಗಳೂರು ದಕ್ಷಿಣ ವಲಯ ಮಾತ್ರವಲ್ಲದೆ, ಎಲ್ಲ ವಲಯಗಳ ವಾರ್ ರೂಮ್‌ಗಳಲ್ಲೂ ಬೆಡ್ ಬುಕ್ಕಿಂಗ್ ಜಾಲ ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲ ವಾರ್ ರೂಮ್‌ಗಳನ್ನೂ ತಕ್ಷಣ ರದ್ದು ಮಾಡಬೇಕು. ಈ ಹಗರಣದ ಕುರಿತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರ ಉಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಜೆಡಿಎಸ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಆಗ್ರಹಿಸಿದ್ದಾರೆ.

ಕೋವಿಡ್ ವಾರ್ ರೂಮ್‌ನಲ್ಲಿ ಕಳೆದ ಬುಧವಾರ ರಾತ್ರಿಯೂ ಬೆಡ್ ಬುಕ್ಕಿಂಗ್ ದಂಧೆ ನಡೆದಿರುವ ಬಗ್ಗೆ ಸೂಕ್ತ ಸಾಕ್ಷ್ಯಗಳಿವೆ. ಈ ಹಿನ್ನೆಲೆಯಲ್ಲಿ ದಕ್ಷಿಣ ವಾರ್ ರೂಮ್ ನಲ್ಲಿ ಎಲ್ಲ ನೌಕರರನ್ನೂ ತಕ್ಷಣ ವಜಾ ಮಾಡಬೇಕು. ನ್ಯಾಯಾಂಗ ತನಿಖೆಯ ಬಳಿಕ ತಪ್ಪಿತಸ್ಥರಲ್ಲ ಎಂದು ಗೊತ್ತಾದ ಸಿಬ್ಬಂದಿಯನ್ನು ಮಹಾನಗರಪಾಲಿಕೆ ಮರುನೇಮಕ ಮಾಡಿಕೊಳ್ಳಲಿ ಎಂದು ಅವರು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಪ್ರತಿದಿನ 1792 ಟನ್ ಆಮ್ಲಜನಕದ ಅವಶ್ಯಕತೆಯಿದೆ. ಆಮ್ಲಜನಕ ಸಿಗದೆ ಚಾಮರಾಜನಗರ, ಕಲಬುರರ್ಗಿ, ವಿಜಯಪುರ ಮತ್ತು ಹುಬ್ಬಳ್ಳಿ ಆಸ್ಪತ್ರೆಗಳಲ್ಲಿ ಒಟ್ಟು 34 ರೋಗಿಗಳು ಸಾವನ್ನಪ್ಪಿದ್ದಾರೆ. ರಾಜ್ಯಕ್ಕೆ ಆಮ್ಲಜನಕ ಪೂರೈಸುವಲ್ಲಿ ಕೇಂದ್ರ ಸರ್ಕಾರ ಬೇಕೆಂದೇ ತಾರತಮ್ಮ ಮತ್ತು ವಿಳಂಬ ಮಾಡುತ್ತಿದೆ ಎಂದು ದೂರಿದ್ದಾರೆ.

ಕೇಂದ್ರದಿಂದ ರಾಜ್ಯಕ್ಕೆ ಬೇಕಾದ ಆಮ್ಲಜನಕ ಪೂರೈಕೆಗೆ ವಿಫಲರಾಗಿರುವ ರಾಜ್ಯದ ಬಿಜೆಪಿಯ ಎಲ್ಲ ಸಂಸತ್ ಸದಸ್ಯರೂ ತಕ್ಷಣ ರಾಜೀನಾಮೆ ನೀಡಬೇಕು. ಬೆಂಗಳೂರಿನ ಸಂಸದ ತೇಜಸ್ವಿ ಸೂರ್ಯ ಮೊದಲು ರಾಜೀನಾಮೆ ನೀಡಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿದ್ದಾರೆ.

ಕೇಂದ್ರದಿಂದ ಎಡಬಿಡಂಗಿ ನೀತಿ: ರಾಜ್ಯದಲ್ಲಿ 1,043 ಟನ್ ಆಮ್ಲಜನಕ ಉತ್ಪಾದನೆಯಾಗುತ್ತಿದೆ. ಆದರೆ ಇದರಲ್ಲಿ ಬಹುಪಾಲು ಆಂಧ್ರ ಪ್ರದೇಶ, ತೆಲಂಗಾಣಗಳಿಗೆ ಕಳುಹಿಸಲಾಗುತ್ತಿದೆ. ಕರ್ನಾಟಕಕ್ಕೆ ವಿಶಾಖಪಟ್ಟಣಂನಿಂದ ಸ್ವಲ್ಪ ಆಮ್ಲಜನಕ ಬರುತ್ತಿದೆ. ಕೇಂದ್ರ ಸರ್ಕಾರದ ಈ ಎಡಬಿಡಂಗಿ ನೀತಿಯಿಂದಲೇ ರಾಜ್ಯದ ಆಸ್ಪತ್ರೆಗಳಲ್ಲಿ ರೋಗಿಗಳ ಸಾವು ಹೆಚ್ಚುತ್ತಿವೆ. ಸಂಸದ ತೇಜಸ್ವಿ ಸೂರ್ಯ ಅವರಿಗೆ ಮತ್ತು ಅವರ ಮಾವ, ಶಾಸಕ ರವಿ ಸುಬ್ರಹ್ಮಣ್ಯಂ ಅವರಿಗೆ ಇದು ಗೊತ್ತಿಲ್ಲವೆ? ಕೇಂದ್ರ ಸರ್ಕಾರವನ್ನು ಪ್ರಶ್ನಿಸುವ ಧೈರ್ಯ ಇವರಿಬ್ಬರಿಗೂ ಇಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರು ರಾಜೀನಾಮೆ ನೀಡಿ:ಚಾಮರಾಜನಗರದಲ್ಲಿ ಒಂದೇ ದಿನ 24 ಕೋವಿಡ್ ರೋಗಿಗಳು ಆಮ್ಲಜನಕ ಇಲ್ಲದೆ ಮೃತಪಟ್ಟಿರುವುದು ದಾರುಣ ಸಂಗತಿ. ಅಲ್ಲಿಯ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರ ನಿರ್ಲಕ್ಷ್ಯವೇ ಇದಕ್ಕೆ ಮುಖ್ಯ ಕಾರಣ. ನೈತಿಕ ಹೊಣೆ ಹೊತ್ತು ಸುರೇಶ್ ಕುಮಾರ್ ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಪ್ರಕಟಣೆಯಲ್ಲಿ ಫಾರೂಕ್ ಆಗ್ರಹಿಸಿದ್ದಾರೆ.