*ಕಾಮ್ರೇಡ್ ಮಾನ್ಪಡೆಯವರ ಸಾವಿಗೆ ಸಿದ್ದರಾಮಯ್ಯ ಸಂತಾಪ ಸಂದೇಶ*

*ರೈತ ಹಾಗೂ ಕಾರ್ಮಿಕ ಚಳವಳಿಗಳ ನಾಯಕ ಮತ್ತು ಪ್ರಜಾಪ್ರಭುತ್ವವಾದಿ ಹೋರಾಟ ಪರಂಪರೆಯ ಹಿರಿಯ ವ್ಯಕ್ತಿತ್ವವಾದ ಮಾರುತಿ ಮಾನ್ಪಡೆಯವರು ನಮ್ಮನ್ನು ಅಗಲಿರುವುದು ಅತೀವ ದುಃಖದ ಸಂಗತಿ.*
ಕೊರೋನಾ ಸೋಂಕಿತರಾಗಿ ಕಳೆದ ಮೂರು ದಿನಗಳಿಂದ ವೆಂಟೆಲೇಟರ್‍ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾನ್ಪಡೆ ಅವರು ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ. 65 ವರ್ಷದ ಮಾರುತಿ ಅವರು ಜನಪರ ಹೋರಾಟಗಳನ್ನೇ ಉಸಿರಾಗಿಸಿಕೊಂಡಿದ್ದವರು. ದೇಶದ ಪ್ರಜಾಪ್ರಭುತ್ವ ಪರಂಪರೆಯನ್ನೇ ಪತನಗೊಳಿಸುವ ಆಕ್ರಮಣಕಾರಿ ಆಡಳಿತ ವ್ಯವಸ್ಥೆ ದೇಶದಲ್ಲಿ ಜಾರಿಗೊಳ್ಳುತ್ತಿರುವ ಹೊತ್ತಿನಲ್ಲೇ ಮಾನ್ಪಡೆಯವರು ನಮ್ಮನ್ನೆಲ್ಲಾ ತೊರೆದಿರುವುದು ಚಳವಳಿಗಳ ಪರಂಪರೆಗೆ ತುಂಬಲಾರದ ನಷ್ಟವಾಗಿದೆ.
*ಸರಕಾರಗಳನ್ನು ಪ್ರಶ್ನಿಸುವುದರಿಂದ-ಪ್ರತಿಭಟಿಸುವುದರಿಂದ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಕೊಳ್ಳುತ್ತದೆ ಎನ್ನುವುದನ್ನು ಮಾನ್ಪಡೆಯವರು ನಂಬಿದ್ದು ಮಾತ್ರವಲ್ಲದೆ ಅದನ್ನೇ ತಮ್ಮ ಯೌವ್ವನದ ದಿನಗಳಿಂದಲೂ ಆಚರಿಸಿಕೊಂಡು ಬರುತ್ತಿದ್ದರು.* ಪ್ರಶ್ನಿಸುವ ಪರಂಪರೆಯನ್ನು ಜನಮಾನಸಕ್ಕೂ ವಿಸ್ತರಿಸುವ ತಮ್ಮ ಕಾಳಜಿ ಕಾರಣಕ್ಕೇ ಕೊರೊನಾ ಕಾಲದಲ್ಲೂ ಮನೆಯಲ್ಲಿ ಕೂರಲಿಲ್ಲ. ಕೊರೊನಾದ ಆತಂಕ ಮತ್ತು ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಜನ ಸಮುದಾಯದ ಪರವಾಗಿ ಸರಣಿ ಪ್ರತಿಭಟನೆಗಳನ್ನು ಸಂಘಟಿಸಿ ಬೀದಿಗಿಳಿದರು. ಸರಕಾರ ವೈದ್ಯಕೀಯ ವ್ಯವಸ್ಥೆಯನ್ನು ಸಮರೋಪಾದಿಯಲ್ಲಿ ಸಮರ್ಪಕಗೊಳಿಸಬೇಕು, ದುಡಿಮೆ ಕಳೆದುಕೊಂಡ ಸಮುದಾಯಗಳಿಗೆ ನೆರವಿನ ಹಸ್ತ ಚಾಚಬೇಕು ಎಂದು ತಿಂಗಳುಗಟ್ಟಲೆ ಬೀದಿಗಳಲ್ಲೇ ಇದ್ದು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾಗಲೇ ಕೊರೊನ ಸೋಂಕಿಗೆ ಒಳಗಾದರು.
ಮೊದಲು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಎಂದು ಜತೆಗಿದ್ದವರ ಒತ್ತಾಯದ ನಡುವೆಯೂ ಹೋರಾಟದ ಕಣದಿಂದ ಹಿಂದೆ ಸರಿಯಲಿಲ್ಲ. ಸೋಂಕು ಇಡೀ ಸಮುದಾಯವನ್ನು ಆವರಿಸುವುದಕ್ಕಿಂತ ಮೊದಲು ಸರಕಾರದ ಕಿವಿ ಹಿಂಡಬೇಕು ಎನ್ನುವ ಬದ್ಧತೆಯಿಂದ ಹೋರಾಟ ಮುಂದುವರೆಸಿದ್ದರು. ಸರಕಾರ-ಮಂತ್ರಿಗಳು-ಅಧಿಕಾರಿಗಳನ್ನು ಎಚ್ಚರಿಸುತ್ತಲೇ ತೀವ್ರ ಅನಾರೋಗ್ಯಕ್ಕೆ ತುತ್ತಾದರು. ಸ್ವತಂತ್ರವಾಗಿ ಆಲೋಚಿಸುವುದನ್ನು ಕಲಿತ ಕ್ಷಣದಿಂದ ಜೀವ ಇರುವವರೆಗೂ ಪ್ರತಿಭಟನಾ ಪರಂಪರೆಯನ್ನು ಮುಂದುವರೆಸಿದ್ದ ಮಾನ್ಪಡೆಯವರ ಅಗಲಿಕೆ ನನಗೆ ವೈಯುಕ್ತಿಕವಾಗಿ ತುಂಬಲಾರದ ನಷ್ಟ. ಜತೆಗೆ ಇಡೀ ನಾಡು ಪ್ರಖರ ಪ್ರಜಾಪ್ರಭುತ್ವವಾದಿ ಧ್ವನಿಯೊಂದನ್ನು ಕಳೆದುಕೊಂಡಂತಾಗಿದೆ. ಪ್ರಜಾಫ್ರಭುತ್ವವನ್ನು ಅವನತಿಗೆ ಕೊಂಡೊಯ್ಯುತ್ತಿರುವ ಈ ಹೊತ್ತಿನಲ್ಲಿ ಅದರ ಉಳಿವಿಗಾಗಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಬೇಕಾಗಿದೆ ಎನ್ನುವ ಅನಿವಾರ್ಯತೆಯನ್ನು ಎಲ್ಲರಿಗೂ ಅರ್ಥ ಮಾಡಿಸುತ್ತಲೇ ಮಾರುತಿ ಮಾನ್ಪಡೆ ಅವರು ಕೊನೆಯುಸಿರೆಳೆದಿದ್ದಾರೆ.
ರೈತ ಕಾರ್ಮಿಕ ಹೋರಾಟಗಳು ಐಕ್ಯತಾ ವೇದಿಕೆಯಲ್ಲಿ ನಡೆಯಬೇಕೆಂದು ಸದಾ ಹಂಬಲಿಸುತ್ತಿದ್ದ ಮಾನ್ಪಡೆಯವರು ಈ ಎಲ್ಲಾ ಸಂಘಟನೆಗಳನ್ನು ಒಗ್ಗೂಡಿಸುವ ಹಠ ತೊಟ್ಟಿದ್ದರು. ಇಡೀ ದೇಶ ಮತ್ತು ಸಮಾಜ ಕೊರೋನಾದ ಆತಂಕದಲ್ಲಿ ಮುದುಡಿ ಹೋಗಿರುವ ಸಂದರ್ಭವನ್ನೇ ದುರುಪಯೋಗಪಡಿಸಿಕೊಂಡು ಕೇಂದ್ರ, ರಾಜ್ಯ ಸರಕಾರಗಳು ಆಘಾತಕಾರಿಯಾದ ರೈತ ಮತ್ತು ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದವು. ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ಕಾರ್ಮಿಕ ಕಾಯ್ದೆ ಮತ್ತು ಎಸ್ಮಾ ಕಾಯ್ದೆಗಳ ತಿದ್ದುಪಡಿಗಳು ಸಮಾಜದ ಎಲ್ಲಾ ವರ್ಗಗಳಿಗೆ ಅನಾಹುತಕಾರಿಯಾಗಲಿವೆ ಎಂದು ಪದೇ ಪದೇ ಹೇಳುತ್ತಿದ್ದರು. *ಆ ಹಿನ್ನೆಲೆಯಲ್ಲೇ ಪ್ರತಿಭಟನೆಗಳಲ್ಲಿ ತೊಡಗಿಸಿಕೊಂಡಿದ್ದರು. ಸರಣಿ ಹೋರಾಟಗಳನ್ನು ಮಾಡುತ್ತಲೇ ಸಮುದಾಯಗಳ ನಡುವೆ ಬೆರೆತಿದ್ದರಿಂದ ತಾವೂ ಕೊರೋನಾ ರೋಗಕ್ಕೆ ತುತ್ತಾದರು. ಜನರು ಸಂಕಷ್ಟದಲ್ಲಿರುವಾಗ, ರೋಗ ಭೀತಿಯಲ್ಲಿರುವಾಗ ಕೇಂದ್ರ, ರಾಜ್ಯ ಸರಕಾರಗಳು ದುಷ್ಟ ಕಾನೂನುಗಳನ್ನು ಜಾರಿಗೆ ತರದೇ ಹೋಗಿದ್ದರೆ ಮಾನ್ಪಡೆಯವರು ಬದುಕುಳಿಯುತ್ತಿದ್ದರು. ಸರ್ಕಾರಗಳೇ ಒಂದರ್ಥದಲ್ಲಿ ಒಬ್ಬ ಹೋರಾಟಗಾರನನ್ನು ಕೊಂದಂತಾಗಿದೆ. ಹಾಗಾಗಿ ಮಾನ್ಪಡೆಯವರು ಜನವಿರೋಧಿ ಸರ್ಕಾರಗಳ ವಿರುದ್ಧದ ಹೋರಾಟಗಳ ಕಾರಣಕ್ಕೆ ಹುತಾತ್ಮರಾಗಿದ್ದಾರೆಂದು ಭಾವಿಸುತ್ತೇನೆ.*
ಇದೇ ಸಂದರ್ಭದಲ್ಲಿ ರೈತ ಕಾರ್ಮಿಕ ದಲಿತ ಸಂಘಟನೆಗಳ ಅನೇಕ ಮುಖಂಡರುಗಳು, ಕಾರ್ಯಕರ್ತರುಗಳನ್ನು ಕೊರೋನಾ ಬಾಧಿಸಿದೆ. ಇನ್ನೂ ಕೆಲವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರೂ ತಮ್ಮ ತಮ್ಮ ಆರೋಗ್ಯಗಳ ಕಡೆಗೆ ಕಾಳಜಿ ವಹಿಸಬೇಕೆಂದೂ ಸಹ ಈ ಸಂದರ್ಭದಲ್ಲಿ ವಿನಂತಿಸಿಕೊಳ್ಳುತ್ತೇನೆ.
ಹಾಗೆಯೇ ನಾವು ಮಾನ್ಪಡೆಯವರ ಬಲಿದಾನವನ್ನು ವ್ಯರ್ಥವಾಗಲು ಬಿಡಬಾರದೆಂದು ವಿನಂತಿಸುತ್ತೇನೆ. ಮಾನ್ಪಡೆಯವರ ಕುಟುಂಬಕ್ಕೆ, ಒಡನಾಡಿಗಳಿಗೆ ಅವರ ಅಗಲಿಕೆಯನ್ನು ತಾಳಿಕೊಳ್ಳುವ ಶಕ್ತಿ ಬರಲಿ ಎಂದು ಪ್ರಾರ್ಥಿಸುತ್ತೇನೆ.

*ವಂದನೆಗಳೊಂದಿಗೆ,*
*ತಮ್ಮ ವಿಶ್ವಾಸಿ,*
*ಸಿದ್ದರಾಮಯ್ಯ*
*ವಿರೋಧ ಪಕ್ಷದ ನಾಯಕರು*